Thursday 12 December 2013

ನಮ್ಮ ಗೂಡು...













ನಾವು ಹಾಗು ನಮ್ಮದೊಂದು ಪುಟ್ಟ ಗೂಡು
ಆಗಸಕು ವಿಶಾಲವಾದುದು ನಮ್ಮಯ ಗೂಡು...
ಪ್ರೀತಿ ವಿಶ್ವಾಸದ ಬೆಸುಗೆಯ ಅಂದದ ಗೂಡು... ಚಂದದ ಗೂಡು ...

ನಿನ್ನಯ ಪ್ರೀತಿಯಲಿ ಅರಳಿಹೆನು ನಾ ತಾವರೆಯಾಗಿ
ತಾವರೆಗೆ ನೀನಾಗಿಹೆ ಬಾಳಜ್ಯೋತಿ...

ನನ್ನಯ ಸರ್ವಸ್ವವೂ ನೀನು... ನಿನ್ನಯ ಸರ್ವಸ್ವವೂ ನಾನು
ನನಗಾಗಿ ನೀನು... ನಿನಗಾಗಿ ನಾನು...

ನಮ್ಮಿಬ್ಬರಿಗಾಗಿಹುದು ನಮ್ಮದೊಂದು ಪುಟ್ಟ ಗೂಡು.

Thursday 21 November 2013

ಎರೆಡೂ ಕೈ ಸೇರಿದ್ರೇನೇ ಚಪ್ಪಾಳೆ...

ಓ ಟೈಟಲ್ ನೋಡಿ ಏನ್ ಫುಲ್ ಖುಷಿನಾ... ಯಾರ್ದಪ್ಪಾ ಲವ್ ಸ್ಟೋರಿ ಅಂತ ಕುತೂಹಲ ಶುರುವಾಯ್ತಾ...
ತಪ್ಪು ನಿಮ್ದಲ್ಲಾ ಬಿಡಿ... ಸಾಮಾನ್ಯವಾಗಿ ಈ ಗಾದೆಯ ಪ್ರಯೋಗ ಆಗೋದು ಇಂತಹ ಪ್ರಮೇಯದಲ್ಲೇ...

ಲವ್ - ಪ್ರೀತಿ ಅಂದಾಕ್ಷಣ ಹುಡುಗ - ಹುಡುಗಿ ಅನ್ನೋದ್ ಬಿಟ್ಟು ಬೇರೆ ಯೋಚ್ನೆನೇ ಬರಲ್ಲಾ... ಇದಕ್ಕೆ ಕಾರಣ ನಮ್ಮ ಸಮಾಜನಾ?... ಖಂಡಿತ ಇಲ್ಲಾ. ಈ ಸಮಾಜದಲ್ಲಿರೋ ನಾವುಗಳು. ಒಡ ಹುಟ್ದೋರಾಗ್ಲಿ... ಒಡನಾಡಿಗಳಾಗ್ಲೀ... ಯಾವುದೇ ಒಂದು ಸಂಬಂಧ  ಬಲವಾಗಿರ್ಬೇಕು ಅಂದ್ರೆ ಎರಡು ಮನಸ್ಸುಗಳ ನಡುವೆ ಅದೇ ಭಾವನೆ... ಅಷ್ಟೇ ಪ್ರೀತಿ-ವಿಶ್ವಾಸ ಇದ್ರೆ ಮಾತ್ರ ಸಾಧ್ಯ.

ಒಂದು ಅಯಸ್ಕಾಂತ ಇನ್ನೊಂದು ಕಬ್ಬಿಣ ಆದ್ರೆ ಆ ಸಂಬಂಧಕ್ಕೆ ಅರ್ಥಾನೇ ಇರಲ್ಲಾ... ಅಯಸ್ಕಾಂತ ಕಬ್ಬಿಣಕ್ಕೆ ಹೋಗಿ ಅಂಟ್ಕೊಂಡ್ರೂ... ಕಬ್ಬಿಣ ಅಯಸ್ಕಾಂತಕ್ಕೆ ಹೋಗಿ ಅಂಟ್ಕೊಂಡ್ರೂ... ಈ ಬಂಧನಕ್ಕೆ ಮೂಲ ಕಾರಣ ಅಯಸ್ಕಾಂತಾನೇ...
ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ನಾವು ಪ್ರೀತ್ಸೋರ್ಗಿಂತ ನಮ್ಮನ್ನ ಪ್ರೀತ್ಸೊರು ನಮ್ಮ ಬಾಳ ಪಯಣದಲ್ಲಿ ಸದಾ ಇರ್ಲಿ ಅಂತ ಆಶಿಸ್ತೀವಿ.

ಒಂದು ಕೈ ಇನ್ನೊಂದು ಕೈ ಗೆ ರಭಸದಿಂದ ಬಂದು ಸೇರಿದ್ರೆ ಅದು ಚಪ್ಪಾಳೆ ಆಗಲ್ಲಾ... ಎರಡೂ ಕೈಗಳು ಒಂದೇ ಸಮನಾಗಿ ಒಂದೇ ವೇಗದಲ್ಲಿ ಬಂದು ಸೇರಿದಾಗ ಮಾತ್ರ ಅದು ಸಾಧ್ಯ. ಪ್ರೀತಿ - ವಿಶ್ವಾಸ ಅನ್ನೋದು ಕೇಳಿ ಪಡ್ಕೊಳಕ್ಕೆ ಅದು ಮಾರುಕಟ್ಟೆಯಲ್ಲಿ ಸಿಗೋ ವಸ್ತು ಅಲ್ಲಾ... ತಂದೆ - ತಾಯಿ ತಮ್ಮ ಮಕ್ಕಳ ಮೇಲೆ ಪ್ರೀತಿಯೆಂಬ ಮಳೆಯನ್ನೇ ಸದಾ ಸುರಿಸ್ತಾರೆ...   ಅಷ್ಟೇ ಪ್ರೀತಿ ಮಕ್ಕಳು ಆವರಿಗೆ ತೋರಿಸಿದ್ರೆ ಅವರಿಗಾಗುವ ಖುಷಿನಾ ಅವರ ಕಣ್ಣಿನಲ್ಲಿ ಮಾತ್ರ ನೋಡಲು ಸಾಧ್ಯ. ಇದು ಒಂದು ಉದಾಹರಣೆ ಮಾತ್ರ.

ಸಂಬಂಧ ಎಂದಾಕ್ಷಣ ತಂದೆ-ತಾಯಿ, ಅಣ್ಣ - ತಮ್ಮ, ಅಕ್ಕ-ತಂಗಿ, ಗಂಡ-ಹೆಂಡತಿ... ಅಷ್ಟೇ ಅಲ್ಲ... ಮಾನವರಾಗಿ ಹುಟ್ಟಿದ ನಮಗೆ ಆ ಭಗವಂತ ಎಣಿಸಲಾರದಷ್ಟು ಸಂಬಂಧವೆಂಬ ಮಾಲೆಯನ್ನೇ ಕರುಣಿಸಿದ್ದಾನೆ.  ಒಂದು ಮಾಲೆ ಸೃಷ್ಠಿಯಾಗಬೇಕಾದ್ರೆ ಪ್ರತಿಯೊಂದು ಹೂ ಕೂಡ ದಾರವೆಂಬ ಪ್ರೀತಿ-ವಿಶ್ವಾಸದ ಬಂಧನದಲ್ಲಿದ್ದರೆ ಮಾತ್ರ ಸಾಧ್ಯ. ಹಾಗೆ ನಾವು ಕೂಡ.

ಪ್ರತಿಯೊಂದು ಸಂಬಂಧಕ್ಕೂ  ತನ್ನದೇ ಆದ ಚೌಕಟ್ಟಿದೆ. ಆ ಚೌಕಟ್ಟಿನಲ್ಲಿ ಪ್ರೀತಿ-ವಿಶ್ವಾಸದ ಬಲ ಒಂದಿದ್ರೆ ಸ್ನೇಹ ... ಪ್ರೀತಿ... ವಿಶ್ವಾಸದ ಭಾಂದವ್ಯಕ್ಕೆ ಅರ್ಥ ಕಲ್ಪಿಸಲು ಸಾಧ್ಯ.  ಈ ಅರ್ಥಪೂರ್ಣವಾದ ಸಂಬಂಧ ನಮ್ಮ ಸಮಾಜದಲ್ಲಿ ಸೃಷ್ಠಿಯಾಗಬೇಕು ಅಂದ್ರೆ, ಅದು ಸಮಾಜವನ್ನ ನಿರ್ಮಿಸಿರುವ ನಮ್ಮಿಂದ ಮಾತ್ರ ಸಾಧ್ಯ.


ಹನಿ... ಹನಿ... ಸೇರಿದ್ರೆನೇ ನದಿ - ಸರೋವರ ಸೃಷ್ಠಿಯಾಗೋದು. ಹಾಗೆ ಸಣ್ಣ ಸಣ್ಣ ಖುಷಿ - ನಿಸ್ವಾರ್ಥದ ಪ್ರೀತಿ ಇದ್ರೆ ಮಾತ್ರ   ಪ್ರೀತಿಯೆಂಬ ಸಬಂಧದ ಸರೋವರ ನಿರ್ಮಾಣವಾಗಲು ಸಾಧ್ಯ. 
 ನಿಮ್ಮ ಪ್ರೀತಿ - ವಿಶ್ವಾಸನ ಸದಾ 
Active ಮೋಡ್ ಗೆ push ಮಾಡಿ
 ಸದಾ ನೀವೂ ಖುಷಿ ಪಡಿ ನಿಮ್ಮವರನೂ ಖುಷಿಪಡಿಸಿ... 

Saturday 19 October 2013


ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪು ಹಣ / ಸ್ಪಷ್ಟ ಸಾಕ್ಷಿಇರದ ಒಂದು ಸಾವಿರ ಟನ್ ಚಿನ್ನ...?

ಮಾನವ ತನ್ನದನ್ನು ಬಿಟ್ಟು ಕಾಣದ  ಸ್ವತ್ತಿಗೆ ಬಾಯ್ತೆಗೆದು ಕುಳಿತಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಇಲ್ಲಿದೆ.
ಭಾರತದ ಗಣ್ಯರು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿರುವ ಕಪ್ಪು ಹಣ ಸುಮಾರು 1456 ಬಿಲಿಯನ್ ಡಾಲರ್  ಇದು ನಮ್ಮ ದೇಶದ ಟ್ಟು ಸಾಲದ 13 ಪಟ್ಟು ಹೆಚ್ಚಿದ್ದು ಈ ಮಾಹಿತಿಗೆ ಪುರಾವೆಗಳು ದೊರೆತಿದ್ದರು, ಸರ್ಕಾರ ಅದನ್ನು ತನ್ನ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಮರಳಿ ಭಾರತಕ್ಕೆ ತರುವಲ್ಲಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಕಾರಣ ತನ್ನ ಸ್ವತ್ತು ದೇಶದ ಸುಧಾರಣೆಗಾಗಿಯೇ?... ಬೇಡ.. ಎಂಬ ಮಹದಾಸೆಯಿಂದ...
19ನೇ ಶತಮಾನದಲ್ಲಿ ಉತ್ತರ ಪ್ರದೇಶದ ದೌಂಡಿಯಖೇರ್ ಹಳ್ಳಿಯನ್ನು ಆಳುತ್ತಿದ್ದ ರಾವ್ ರಾಮ್ ಸಿಂಗ್ ಸುಮಾರು ಒಂದು ಸಾವಿರ ಟನ್ ಚಿನ್ನವನ್ನು ಭೂಮಿಯಲ್ಲಿ ಹುದುಗಿಸಿಟ್ಟಿದ್ದನ್ನು ಯೋಗಿ ಸ್ವಾಮಿ ಶೊಬನ್ ಸರಕಾರ್ ಕನಸಿನಲ್ಲಿ ಕಂಡ ನಿಧಿಗೆ ಸರ್ಕಾರ ಬಾಯ್ತೆಗೆದು ಕುಳಿತಿದೆ. ಒಂದು ಸಾವಿರ ಟನ್ ಚಿನ್ನ ಇರುವುದಕ್ಕೆ ಯಾವುದೇ ಸ್ಪಷ್ಟ ಆಧಾರವಿಲ್ಲವಾದರೂ ಒಬ್ಬ ಸಾಧು ಕಂಡ ಕನಸಿನ ಆಧಾರದ ಮೇರೆಗೆ ಒಂದು ತಿಂಗಳೊಳಗೆ ಕಾರ್ಯಾಚರಣೆ ಮುಗಿಸಲು ಪಣ ತೊಟ್ಟಿರುವುದು ನಿಜವಾಗಿಯೂ ಪ್ರಶಂಸನೀಯ...  ಹಣ ಎಂದರೆ ಹೆಣಾನೂ ಬಾಯ್ಬಿಡತ್ತೆ ಅನ್ನೋ ಗಾದೆ ಮಾತು ಬರಿ ಮಾತಲ್ಲಾ ... ಉದಾಹರಣೆಗಳು ತುಂಬಾ ಇವೆ. ಅದರಲ್ಲಿ ಇದೂ ಕೂಡ ಒಂದು.

ಇದರ ಪರಿಣಾಮವೇನು?  ಸುಮಾರು ಒಂದು ಸಾವಿರ ಟನ್ ಚಿನ್ನ ಅಂದರೆ... ಭೂತಾಯಿಯ ಮಡಿಲನ್ನು ಎಷ್ಟು ಆಳದವರೆಗೆ ಅಗೆಯಬೇಕು... ಇವರ ದುರಾಸೆಗೆ ಭೂಮಿಯ ಇನ್ನೊಂದು ತುದಿಯವರೆಗೂ ಕಾರ್ಯ ಜರುಗುವುದಂತು ನಿಜ. ಇದರ ಕಾರ್ಯಾಚರಣೆಗೆ ತಗಲುವ ವೆಚ್ಚ ... ಪರಿಶ್ರಮ ಬಂಡೆಮೇಲೆ ಮಳೆ ಸುರಿದಂತೆ...  ವಿನಾಶಕಾಲೆ ವಿಪರೀತ ಬುದ್ದಿ ಎನ್ನುವುದು ಇದಕ್ಕೆ. ಪ್ರಳಯದ ಮುನ್ಸೂಚನೆಯನ್ನು ಮಾನವ ತಾನಾಗಿಯೇ ಬರಮಾಡಿಕೊಂಡಿದ್ದಾನೆ. ಒಂದು ಸಾವಿರ ಟನ್ ಚಿನ್ನ ಸಿಗಲಿ... ಸಿಗದೇ ಇರಲಿ... ಪ್ರಕ್ರುತಿಯ ವಿಕೋಪಕ್ಕೆ ಎಡೆಮಾಡಿರುವ ಈ ನಿರ್ಧಾರ ಪ್ರಳಯ ಆಗುವುದು ಕಟು ಸತ್ಯ ಎಂಬುದನ್ನು ಸಾಬೀತು ಮಾಡಿದೆ. "ಮ್ಯಕನಸ್ ಗೋಲ್ಡ್" ಚಿತ್ರ ವೀಕ್ಷಿಸಿದವರಿಗೆ ಇದು ನಿಜ ಎಂದು ಒಪ್ಪಿಕೊಳ್ಳುವಲ್ಲಿ ಎರೆಡು ಮಾತಿಲ್ಲ...

Sunday 29 September 2013

ಯಾವ ಜನ್ಮದ ಮೈತ್ರಿಯೋ...











ಸ್ನೆಹದ ಕಸಿ  ಚಿಗುರಿ, ಹೆಮ್ಮರವಾಗಿ,
ಮುಗಿಲೆತ್ತರಕೇರಿ, ಸರ್ವಕಾಲದಲು
ಸದಾ ಹಸಿರು, ಹೂ ಕಂಪಿನಿಂದ ರಾರಾಜಿಸುತಿರುವ ಈ ಮೈತ್ರಿ,
ಬಾಳ ಪಯಣದಲಿ ಯಾವ ಜನ್ಮದ ಮೈತ್ರಿಯಾಗಿ
ನಮ್ಮನು ಬಂಧಿಸಿಹುದೊ ಕಾಣೆ...

ಬಿರು ಬಿಸಿಲಿಗೆ ನೆರಳಾಗಿ,
ಸಿಡಿಲ ಮಳೆಯಲಿ ಮುಂಗಾರಿನ ಹನಿಯಾಗಿ,
ನಾ ಮತ್ತೆ ಚಿಗುರಿ... ನಲಿಯಲು
ಆಸರೆಯಾದ ಈ ಮೈತ್ರಿ... ಯಾವ ಜನ್ಮದ ಮೈತ್ರಿಯಾಗಿ
ನಮ್ಮನು ಬಂಧಿಸಿಹುದೊ ಕಾಣೆ...

ಪ್ರಕೃತಿಯ ರಮಣೀಯ ತಾಣದಲಿ
ತ್ರಿಲೋಕ ಸುತ್ತಿಸಿ... ಮರೆಯಲಾರದ
ಸವಿನೆನಪೊಂದ ಕರುಣಿಸಿದ ಈ ಮೈತ್ರಿ...
ಯಾವ ಜನ್ಮದ ಮೈತ್ರಿಯಾಗಿ
ನಮ್ಮನು ಬಂಧಿಸಿಹುದೊ ಕಾಣೆ...

Sunday 22 September 2013

ಮಾನವೀಯತೆಗೆ ಮಾರಕವಾದ ನನ್ನ ಪ್ರೀತಿಯ ಕುಸುಮಗಳು 

ಹಾಯ್ ಫ್ರೆಂಡ್ಸ್ ... ಇದೇನು? ಪರಿಚಯನೇ ಇಲ್ಲಾ ಫ್ರೆಂಡ್ಸ್ ಅಂತಿದೀನಿ ಅಂತ ಆಶ್ಚರ್ಯಾನಾ... ಹಾಗನ್ನೋದು ಸಹಜ ಬಿಡಿ... ನಾವು ಎಷ್ಟೇ ಪ್ರೀತಿ-ವಿಶ್ವಾಸದಿಂದ ನಿಮ್ಮನ್ನ ನೋಡಿದ್ರೂ ನಿಮ್ಮಲ್ಲಿ ಕೆಲವ್ರಿಗೆ ನಮ್ಗೆ ತೊಂದ್ರೆ ಕೊಡ್ದೆ ಇರೋಕೆ ಬರಲ್ಲಾ... ಇದೇ ವಾತಾವರಣದಲ್ಲಿ ನಮ್ಮಮ್ಮ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್  ಲೈಬ್ರರಿ ಪಕ್ಕ ಏಳು ಮರಿಗಳಿಗೆ ಜನ್ಮ ನೀಡಿದ್ಲು. 

ನಾವು ಅಮ್ಮನ ಜೊತೆ ಸುಖವಾಗಿದ್ವಿ... ನಾವು ಯಾರ್ಗೂ ತೊಂದ್ರೆ ಕೊಟ್ಟೊರೇ ಅಲ್ಲಾ... ಆದ್ರೆ ಮಂಗಳವಾರ, ಸೆಪ್ಟೆಂಬರ್ 3, 2013 ರಂದು ಕಾಲೆಜ್ ಕ್ಯಾಂಪಸ್ಗೆ ನಗರಸಭೆಯವ್ರು ಬಂದು ನಮ್ಮಮ್ಮ ಹಾಗೂ ಸುಮಾರು ಏಳೆಂಟು ಜೀವಕ್ಕೆ ವಿಷ ಹಾಕಿದ್ರು... ನಮ್ಮಮ್ಮ ಒದ್ದಾಡ್ತಿದ್ದಿದ್ದು  ನೋಡಿ ಕಾಲೇಜ್ ವಿದ್ಯರ್ಥಿಗಳು ಡಾಕ್ಟರ್ನ ಕರ್ಕೊಂಡು ಬಂದ್ರು... ಅವ್ರು ಏನೂ ಮಾಡ್ಲಿಕ್ಕಾಗಲ್ಲಾ ಅಂದಾಗ, ಬೈಕ್ನಲ್ಲಿ ಆಸ್ಪತ್ರೆಗೆ ಕರ್ಕೊಂಡು ಹೋದ್ರು... ಆದ್ರೂ ನಮ್ಮ ಪ್ರೀತಿಯ ಅಮ್ಮ ಉಳಿಯಲಿಲ್ಲಾ...
ಈ ಪ್ರಪಂಚಕ್ಕೆ ಬಂದು 15 ದಿನ ಆಗಿದ್ದ  ನಾವು ಹಸಿವಿನಿಂದ  ಅಮ್ಮ ಬರೋದ್ನೇ ಕಾಯ್ತಾ ಇದ್ವಿ... ಆದ್ರೆ ಅಮ್ಮಾ ಬರ್ಲೇ ಇಲ್ಲಾ... ಬದಲಿಗೆ ಹಾಲು ಉಣಿಸಿ ಹಸಿವು ನೀಗಿಸಿ ಅಮ್ಮನ ಅಕ್ಕರೆಯನ್ನ ತೋರಿದ್ದು... ನಮ್ಮ ಪ್ರೀತಿಯ ವಿದ್ಯಾರ್ಥಿಗಳು. ನಮ್ಮನ್ನಗಲಿದ ಎಲ್ಲರಿಗೂ ಶಾಂತಿ ಕೋರಿ ಮೌನಾಚರಣೆ ಮಾಡಿ ಭೂತಾಯಿಯ ಮಡಿಲಲ್ಲಿ ಮಲಗಿಸಿದ್ರು.
ಅಂದು ಮಧ್ಯಾಹ್ನ ಶ್ಯಾಮ ಅವ್ನ ದೋಸ್ತ್  (ಗುಡ್ಡಿ) ನೋಡ್ಲಿಕ್ಕೆ ಕಾಲೇಜ್ಗೆ ಬಂದಾಗ ನಮ್ಮನ್ನ ನೋಡಿ ಎಷ್ಟು ಚಂದ ಮರಿಗಳು ಅಂದಾಗ ನಮ್ಗು ಸಕ್ಕತ್ ಖುಷಿಯಾಗಿತ್ತು...
ಸಂಜೆ ಶ್ಯಾಮನ ದೋಸ್ತ್ ಫೋನ್ ಮಾಡಿ ನಮ್ಮ ವಿಚಾರ ಹೇಳ್ದಾಗ ಮರುಗಿ... ಒಂದು ಮರಿನ ನಾ ಕರ್ಕೊಂಡು ಹೋಗ್ತೇನೆ ... ನಾಳೆ ಬರ್ತೀನಿ ಅಲ್ಲಿವರ್ಗೂ ನೋಡ್ಕೊಳಿ  ಅಂತ ಅವ್ನ ದೋಸ್ತ್ ಗೆ ಹೇಳ್ದ... ದೋಸ್ತ್ ಮನೇಲಿ ರಾಖಿ ಇರೋದ್ರಿಂದ ದೋಸ್ತ್ ನನ್ನ C ಶರತ್ (ವಿದ್ಯಾರ್ಥಿ) ರೂಂ ಗೆ ಕಳ್ಸಿದ್ಲು.  ಶರತ್ ಗೆ ... ಪಾಪ ತುಂಬಾ ತೊಂದ್ರೆ ಕೊಟ್ಟೆ, ಆದ್ರೂ ಏನೂ ಹೇಳ್ದೆ ಸಮಾಧಾನವಾಗಿದ್ದ. 
ಮರು ದಿನ ಬೆಳಿಗ್ಗೆ ಶರತ್ ನನ್ನ ಮತ್ತೆ ಕಾಲೇಜ್ಗೆ ಕರ್ಕೊಂಡು ಬಂದು ದೋಸ್ತ್ಗೆ ಕೊಟ್ಟ... ಶ್ಯಾಮ ಬರೋದ್ರೊಳ್ಗೆ ನನ್ಗೆ ಸ್ನಾನ ಮಾಡ್ಸಿ... ಹಾಲು-ಬಿಸ್ಕೆಟ್ ಕೊಟ್ಟು ಎಲ್ರೂ ಪ್ರೀತಿಯಿಂದ ನೋಡ್ಕೊಂಡಿದ್ರು... ಆದ್ರೆ ಶ್ಯಾಮ ನನ್ನ ಕರ್ಕೊಂಡ್ ಹೋಗ್ಲಿಕ್ಕೆ ಬಂದಾಗ ನನ್ನ ಅಗಲಿಕೆ ಎಲ್ಲರನ್ನೂ  ಬೇಜಾರಾಗಿಸಿತ್ತು...
ಹೂಂ... ನಾನು, ಶ್ಯಾಮ್ ಹಾಗು ದೋಸ್ತ್ ಸಿಟಿ ಬಸ್ ಹತ್ತಿ ಬಸ್ ಸ್ಟ್ಯಾಂಡ್ ತಲ್ಪಿದ್ವಿ... ರಿಪ್ಪನ್ ಪೇಟೆ ಬಸ್ ನಮ್ಗಾಗಿ ಕಾಯ್ತಾ ಇತ್ತು... ಎಲ್ಲವೂ ಹೊಸ ಅನುಭವ ಆಗಿದ್ದ ನನ್ಗೆ ಭಯ ಶುರು ಆಗಿತ್ತು... ಆದ್ರೆ ಇವ್ರಿಬ್ರು ಇರೋದ್ರಿಂದ ಯಾವ್ದೆ ಯೋಚ್ನೆ ಮಾಡ್ದೆ ಹಾಗೆ ಮಲ್ಗಿದ್ದೆ... ಆ ಡ್ರೈವರ್ ಹಾಕೋ ಬ್ರೇಕ್ ಗೆ ಒಮ್ಮೆ ಬೆಚ್ಚಿ ಅಲ್ಲೆ ಸುಸ್ಸು ಮಾಡ್ದೆ... ಅ ಟೈಮ್ನಲ್ಲಿ ಶ್ಯಾಮ ಟಿಷ್ಯು ಪೇಪರ್ನಿಂದ ಸರಿಯಾದ್ ಸಮಯಕ್ಕೆ ಮ್ಯಾನೇಜ್ ಮಾಡಿದ್ ನೋಡಿ ಎಲ್ರೂ ನಕ್ಕಿದ್ರು... ಅಷ್ಟೆಲ್ಲಾ ಮ್ಯಾನೇಜ್ ಮಾಡಿದ್ರು ಶ್ಯಾಮನ  ಜೀನ್ಸ್ ಸ್ವಲ್ಪ ನೆಂದಿತ್ತು... ನಂದೇನು ತಪ್ಪಿಲ್ಲಾ... ಡ್ರೈವರ್ ಹಾಗಾ ಬ್ರೇಕ್ ಹಾಕೋದು... ನಾನು ಮೊದಲನೆ ಸಲ  ಬಸ್ನಲ್ಲಿ ಹೋಗ್ತಿರೋದು ಅಂತ ... ನೋಡ್ಕೊಂಡು ನಿದಾನಕ್ಕೆ ಹೋಗದಲ್ವಾ... ಅಬ್ಬಾ...  ಅಂತೂ ಇಂತು  ನಮ್ ಸ್ಟಾಪ್ ಬಂತು...

ನನ್ಗಾಗಿ ಮನೆ ಬಾಗಿಲು ತೆಗ್ದೇ ಇತ್ತು... ತೆರೆದಿದೆ ಮನೆ ಓ ಬಾ ... ಅಥಿತಿ... ಅಲ್ರಿ...  ನನ್ನನ್ನ ಎನ್ ಗೆಸ್ಟ್ ಅನ್ಕೊಂಡ್ರಾ...  ನಾನು ಕೂಡ ಶ್ಯಾಮನ ಮನೆಯ ಒಬ್ಬ ಸದಸ್ಯ... ಶ್ಯಾಮ ಹಾಗು ಅಪ್ಪ-ಅಮ್ಮ ನನ್ಗೆ ಜಿಮ್ಮಿ ಅಂತ ನಾಮಕರಣ ಮಾಡಿದ್ರು...
ಈ ಕುಟುಂಬದ ಸದಸ್ಯನಾಗೋಕೆ ನಾನ್ ಪುಣ್ಯ ಮಾಡಿದ್ದೆ ಅಂತ ನಾನಂದ್ರೆ ... ನಾನ್ ಇವ್ರ ಕುಟುಂಬಕ್ಕೆ ಬರೋದ್ಕೆ ಇವ್ರು ಪುಣ್ಯ ಮಾಡಿದ್ರು ಅಂತಾರೆ... ಏನೇ ಇರ್ಲಿ, ಇವ್ರು ಮಾಡ್ತಿರೋ ಆರೈಕೆಗೆ - ಪ್ರೀತಿಗೆ ನಾನು ಮಾತ್ರ  ಸದಾ ಚಿರಋಣಿ...
 ಹಾ.. ಇನ್ನೊಂದು ವಿಷಯ...  ನನ್ನ ಆರು ತಂಗಿಯರಿಗೂ ಸಹಾ ಆಸರೆ ಸಿಕ್ಕಿರುವುದು ಕೇಳಿ ತುಂಬಾ
ಖುಷಿಯಾಯಿತು... ನಮ್ಮ ಅಮ್ಮ ಕೂಡ ಮರಳಿ ಜನ್ಮ ಪಡೆದು ನಮ್ಮ ಹಾಗೆ ಸಂತೋಷದಿಂದ ಇರ್ಲಿ ಅನ್ನೊದೇ ಆಸೆ...
ಶ್ಯಾಮನ ಕುಟುಂಬದಲ್ಲಿ ಒಬ್ಬನಾಗಲಿಕ್ಕೆ ಹಾಗು ನನ್ನ ತಂಗಿಯರ ಆಶ್ರಯಕ್ಕೆ  ಸಹಾಯ ಮಾಡಿದ ಎಲ್ರಿಗೂ ತುಂಬಾ ಥ್ಯಾಂಕ್ಸ್... ನಿಮ್ಮ ಬಾಳು ಸದಾ ವಸಂತವಾಗಲಿ...
ಮಾನವೀಯತೆಯ ಈ ನಿಮ್ಮ ಪ್ರೀತಿ ಪ್ರತಿಯೊಬ್ಬರ ಬಾಳಿನಲ್ಲೂ ಜ್ಞಾನ ಜ್ಯೊತಿಯನ್ನು ಬೆಳಗಿಸಿ ಮಾನವೀಯತೆಯನು ಕಲಿಸಲಿ ...

ನಿಮ್ಮ ಪ್ರೀತಿಯ
ಜಿಮ್ಮಿ...

Thursday 5 September 2013

ಕಾಕ್ಟೇಲ್ ಆಫ್ ಮೈ ಲೈಫ್

ಮಧ್ಯರಾತ್ರಿ 12 ಗಂಟೆ ಸಮಯ...!!! ಯಾರೋ ಜೋರಾಗಿ ಬಾಗಿಲು ತಟ್ಟಿದ ಶಬ್ದ... ಎಲ್ಲರ ನಿದ್ರೆಗೆ ಬ್ರೇಕ್ ಹಾಕಿ ಹೃದಯ ಬಡಿತ ಜೋರಾಗಿಸಿತ್ತು.
ಅಣ್ಣ ಕಿಡ್ಕಿನಲ್ಲಿ ನೋಡಿ ನಿನ್ನ ಫ್ರೆಂಡ್ಸ್ ಬಂದಿದಾರೆ ಅಂದ...
ಇಷ್ಟೊತ್ನಲ್ಲಾ.!!!? ಅದೇ ನನ್ನ ಎರಡ್ ತರ್ಲೆ ಗುರು ಶ್ಯಾಮ ಅಂತ ಮನ್ಸು ಹೇಳ್ತಿತ್ತು ಎದ್ದು ಬಾಗಿಲು ತೆಗಿದ್ರೆ ಅದೇ ತರ್ಲೆಗಳು ನನ್ನೆದ್ರಿಗೆ ನಿಂತಿದ್ರು ಇವ್ರಿಬ್ರನ್ನ ನೋಡಿದ್ ಖುಷಿಲಿ ಏನ್ ಹೇಳ್ಬೇಕು ಅಂತಾನೇ ತೋಚ್ಲಿಲ್ಲಾ
“Happy Birthday to you... Happy Birthday to you... Happy Birthday to you dear Guddi”  ಅಂತ ಇವ್ರಿಬ್ರು ಹಾರೈಸಿದ್ದೇ ತಡ ಎಲ್ಲಿದ್ನೋ ಏನೋ ಮಳೆರಾಯ ಖುಷಿ ತಡಿಲಿಕ್ಕಾಗ್ದೆ ನಮ್ ಜೊತೆ ಸೇರಿದ್ದ... ಈ ಸಲ ಮಳೆರಾಯಾನೋ ಇನ್ ಯಾವತ್ತೂ ಮಳೆ ಬೇಕು ಅನ್ಬಾರ್ದು ಅನ್ನೊ ರೀತಿ ಸುರಿತಿದ್ದ ಇಂಥ ಮಧುರ ಕ್ಷಣ ನನ್ ಲೈಫ್ನಲ್ಲಿ ನನಿಗೆ ಸಿಕ್ಕಿದ್ದು ಇದೇ ಮೊದ್ಲು... J ಜೀವಕ್ಕೆ ಜೀವ ಕೊಡೊ ಇವ್ರನ್ನಾ ಪಡೆದ ನನ್ಗೆ ನಿಜವಾಗ್ಲೂ ಹೆಮ್ಮೆ ಅನ್ಸತ್ತೆ 
ಇಷ್ಟೊತ್ನಲ್ಲಿ ಹಾಗೆ wish ಮಾಡಿ ಹೋಗೋರಲ್ಲಾ ಅಂತ ಗೊತ್ತಿತ್ತು... ಆದ್ರೆ ಕೈನಲ್ಲಿ ಏನೂ ಇಲ್ದೆಇರೋದ್ ನೋಡಿ ಎಲ್ಲೊ ಒಂದ್ಕಡೆ ಸಮಾಧಾನ ಇತ್ತು...  ಅಷ್ಟ್ರಲ್ಲಿ  ನನ್ನ ಕಣ್ಣಿಗೆ ಕ್ರೋಟಾನ್ ಗಿಡದ ಪಕ್ಕ ಏನೋ ಬಿಳಿ ಕವರ್ ಕಾಣಿಸ್ತು... ಸಮಾಧಾನವಾಗಿದ್ದ ನನ್ಗೆ ಮತ್ತೆ ಭಯ ಶುರುವಾಯ್ತು. ಕೇಕ್ ಕವರ್ ಕಣ್ರೀ ... ಇವ್ರು ತಿನ್ಸೊದ್ಕಿಂತ ಮೆತ್ತೊದ್ಕೆ ತಂದಿದಾರೆ ಅಂತ confirm ಆಯ್ತು. ಕೇಕ್ ಕಟ್ ಮಾಡಿ ಒಬ್ರಿಗೊಬ್ರು ತಿನ್ಸಿದ್ದಷ್ಟೆ ಗೊತ್ತು... ಇಬ್ರು ಸೇರಿ ನನ್ಗೆ jam ಹಚ್ಚಿದ್ ಬ್ರೆಡ್ getup ಕೊಟ್ಟಿದ್ರು...
ಒಂಟಿ ಗುಬ್ಬಿ...L ಎರಡ್ ಜಿಮ್ ಮಾಡಿ ಬೆಳ್ಸಿರೋ ಈ ಘಟಾನ್ ಘಟಿಗಳಿಗೆ ಏನ್ ಮಾಡಿರತ್ತೆ ಅನ್ಕೊಂಡ್ರಾ... ಹೂಂ ನಾವು ನಮ್ ತಂಟೆಗ್ ಬಂದೋರ್ನಾ ಹಾಗೆ ಬಿಡೋ ಜಾಯ್ಮಾನ್ದೋರೇ ಅಲ್ಲಾ ಕಣ್ರೀ... ಸುತ್ತಿ ಬಳ್ಸಿಯಾಕ್ರೀ? ಇದುವರ್ಗೂ ನಂಗ್ ಕೇಕ್ ಮೆತ್ತೊಕ್ ಬಂದೋರು ನನ್ನ ಒಂದ್ ಆವಾಜ್ ಗೆ ಸುಮ್ನಾಗಿದ್ರು... ಆದ್ರೆ ಇವತ್ತು ಈ ತರ್ಲೆಗಳು ಮಾಡಿದ್ದು ನನಿಗ್ ಇಷ್ಟಾ ಇಲ್ದೆ ಇರೋದಾದ್ರು... ಇವರ ಪ್ರೀತಿ - ವಿಶ್ವಾಸ ಆವಾಜ್ ಹಾಕೊ ಯೋಚ್ನೆ ಮಾಡಕ್ಕೇ ಬಿಡ್ಲಿಲ್ಲಾ... ಇದೇ ಕಣ್ರೀ ನಿಜವಾದ ಪ್ರೀತಿ...J ಇಲ್ಲಿ ಇಷ್ಟ - ಗಿಷ್ಟ ಅನ್ನೋ ಪ್ರಮೇಯಾನೇ ಬರಲ್ಲಾ... ಹಾಗಂತ ಮೂರ್ನೆ ತರ್ಲೆ ನಾನ್ ಸುಮ್ನಿರ್ತೀನಾ... ಆ ಎರ್ಡ್ ತರ್ಲೆಗಳ್ಗೂ ನನ್ getup  ಕೊಡೋದ್ರಲ್ಲಿ ಒಂದ್ rangeಗೆ success ಆಗಿದ್ದೆ... J  
ಹೂಂ ... ಹಚ್ಚೋದೇನೋ ಹಚ್ದೆ... ಆದ್ರೆ ಕೊನೆಗೆ ನಾನೆ ಆ ತರ್ಲೆಗಳ್ಗೆ ಸ್ನಾನ ಮಾಡ್ಸೋ ಹಾಗಾಯ್ತು... ಅಯ್ಯೋ ನನ್ಗೇನ್ ಕಷ್ಟ ಆಗ್ಲಿಲ್ಲಾ ಬಿಡಿ... ನನ್ ರಾಖಿಗೆ ನಾನೆ ಸ್ನಾನ ಮಾಡ್ಸೋದಾ... ಇವ್ರೇನು ಅನ್ಸ್ತು... ಪಾಪ ರಾಖಿ ತರ್ಲೆ ಮಾಡ್ದೆ descent ಆಗಿರ್ತಿದ್ದ... ಆದ್ರೆ ಈ ಕಪಿಗಳು ಅಲ್ಲೂ ನೀರೆರ್ಚಾಡ್ಲಿಕ್ಕೆ ಶುರು ಮಾಡಿದ್ರು... ಮುಖಕ್ಕೆ ಸೀಗೆಪುಡಿ ಹಚ್ಕೊಂಡಿದ್ದ ಗುರು ಸ್ವಲ್ಪ ಹೊತ್ತು ಕಣ್ ಬಿಡ್ಲಿಕ್ಕಾಗ್ದೆ ಸುಮ್ನಿದ್ದಾ... ಪಕ್ದಲ್ಲೆ ಇದ್ದ ನಾವು silent ಆಗಿ ಅವ್ನನ್ನೇ ನೋಡ್ತಿದ್ವಿ... ಏಯ್ ... ಏಯ್ ... ಏನಾಯ್ತ್ರೋ... ಯಾರೂ ಏನೂ ಮಾತಾಡ್ತಿಲ್ಲಾ... ನನ್ಗೇನೂ ಕಾಣ್ಸ್ತಿಲ್ಲಾ... ನೀರ್ ಹಾಕ್ರೋ... ಅಂದ... ಪಾಪ ಗುರುಗೆ ಒಳ್ಳೆ ಪೀಕ್ಲಾಟ ಆಗಿತ್ತು  ... ಆದ್ರೆ   ಆ ಸೀನ್ ನೋಡಿದ್ ನಮಿಗ್ ಮಾತ್ರ  ಮಸ್ತ್ ಕಾಮಿಡಿಯಾಗಿತ್ತು... ಯಾರಿಗ್ ಸಿಗತ್ರಿ ಇಂತ ಅದ್ರುಷ್ಟ... JJJ
ಮುಖಕ್ಕೆ ನೀರ್ ಹಾಕಿದ್ಮೇಲೆ ಅಯ್ಯೊ ನಿನ್ ಕೈನಾ ... ನಾನೆಲ್ಲೊ ರಾಖಿ ಅನ್ಕೊಂಡೆ ಅಂದ... ಇಷ್ಟ್ ಭಯ ಇರ್ಬೇಕ್ರೀ...  ನನ್ ರಾಖಿ ಅಂದ್ರೆ ಜಿಮ್ ಮಾಡಿ ಬೆಳ್ಸಿರೋ ಎಂಥಾ ದೇಹಾನೂ ನಡ್ಗತ್ರೀ...
ಫ್ರೆಶ್ ಆಗಿ ಸ್ನಾನ ಮಾಡ್ಕೊಂಡು  ಮೀಟ್ರ್ ಹೊಡಿತಿದ್ವಿ... ಅಷ್ಟೊತ್ಗೆ ಶ್ಯಾಮ - ಗುರು ಏನೋ ತೋರ್ಸ್ತೀನಿ ಅಂದ್ಯಲೊ ಅಂದ ... ಈ ನಮ್ ತರ್ಲೆ ಆಟದಲ್ಲಿ ಒಂದು ಜೀವ ನೀರಲ್ಲಿ ಬಿದ್ದು ಒದ್ದಾಡ್ತಿರೋದು ನಮ್ಗಳಿಗೆ ಗೊತ್ತೇ ಆಗ್ಲಿಲ್ಲಾ... ಆಗ್ಲೇ ಗುರುಗೆ ಗೊತ್ತಾಗಿದ್ದು ಕಳೆದ ಎರಡ್ ತಿಂಗ್ಳ ಹಿಂದಷ್ಟೇ ಸದಾ ಅವ್ನ ಜೊತೆಗಿದ್ದ ಒಂದು ಜೀವಕ್ಕೆ ಏನೂ ಆಗ್ಬಾರ್ದು ಅಂತ ಒಂದು safe place  ಅಲ್ಲಿ ಬಿಟ್ಟಿದ್ದೆ ಅಂತ... ಆದ್ರೆ ಆ ಜಾಗ ಎಷ್ಟು safe ಆಗಿತ್ತು ಅಂದ್ರೆ...  ಆ ಜೀವ ಸುಮಾರು ಒಂದ್ ಗಂಟೆ ನೀರಲ್ಲಿ ಈಜ್ತಾ..  ಈಜ್ತಾ... ಮಂದಹಾಸ ಬೀರ್ತಾ ಸೂರ್ಯನ levelಗೆ ಬೆಳಕ್ ಕೊಡ್ತಾ ಕೋಮ ಸ್ಟೇಜಲ್ಲಿತ್ತು. ಆ ಜೀವಾನ ಉಳ್ಸೋಕೆ ಇವ್ರು ಪಟ್ಟ ಸಹಾಸ ಅಷ್ಟಿಷ್ಟಲ್ರೀ...
ಶ್ಯಾಮ  three fin air blower ನ ಒಂದೇ ಕೈನಲ್ಲಿ  ಹಿಡ್ಕೊಂಡು ಸುಮಾರ್ ಹೊತ್ತು ಒಣಗ್ಸ್ದ ... ಬಿಸಿ ಮಾಡಿದ್ರೆ ಸರಿ ಹೋಗತ್ತೆ ಅಂತ 60 ಹಾಕಿನೂ ಟ್ರೈ ಮಾಡ್ದ ... ಆದ್ರೆ ಆ ಜೀವ table fan, 60 volt bulb heatಗೂ ಮಿಸ್ಕಾಡ್ದೆ ಚಮ್ಮಕ್ ಚಲ್ಲೊ... ತರ ಫೋಸ್ ಕೊಟ್ಟು ಕಣ್ಣಿಗೆ ಕುಕ್ತಿತ್ತು...
ಬೆಳಿಗ್ಗೆ ಮೂರುವರೆ ಆಗಿತ್ತು... ಗುರು ಶ್ಯಾಮ ನಾಳೆ ಬೆಳಿಗ್ಗೆ ಸಿಗ್ತೀವಿ ಅಂತ ಆ ಜೀವಾನೂ ಕರ್ಕೊಂಡು ರಿಪ್ಪನ್ ಪೇಟೆಗ್ ಹೊರ್ಟ್ರು... ಅವತ್ತು ಭಾನ್ವಾರ ಆದ್ರಿಂದ  ಶಾಪ್ ಎಲ್ಲಾ ಕ್ಲೋಸ್ ಆಗಿತ್ತು... ಅದ್ಕೆ ಗುರು ನಾನ್ ನಾಳೆ ಬೆಂಗಳೂರ್ ಗೆ ಹೋಗಿ checkup ಮಾಡ್ಸ್ತಿನಿ ಏನೂ ಆಗಲ್ಲಾ ಅಂದ.  ಸರಿ ಅಂತ ಮೂರು ಜನ ನಮ್ ಮಾಮೂಲ್ 5 ಸ್ಟಾರ್ ಗೆ ಹೋಗಿ light, king, beautyorder ಮಾಡಿದ್ವಿ... ನಮ್ ಬಗ್ಗೆ ಅಪಾರ್ಥ ಮಾಡ್ಕೋಬೇಡ್ರೀ... ಸ್ವಲ್ಪ ಬಿಡ್ಸಿ ಹೇಳ್ತೀನಿ ತಾಳಿ... Light House, King Maker, Costal Beauty ಇವೆಲ್ಲಾ ನಮ್ ಶಿಮೊಗ್ಗದ ನೆಹರೂ ರೋಡ್ನ ಪಂಚತಾರದಲ್ಲಿರೋ ಐಸ್ ಕ್ರೀಮ್ brandಗಳು ಕಣ್ರೀ... ಆ ರುಚಿ ಸವಿತಾ... ಹಳೆ ತರ್ಲೆ ನೆನ್ಪನ್ನಾ ಮೆಲ್ಕ್ ಹಾಕ್ತಾ... ಕಡೆಗೆ ಒಂದ್  fresh grapes wine ... cold coffee ಹಾಕಿ ಅಲ್ಲಿಂದ ಹೊರಟ್ವಿ...
ಮೂರು ತರ್ಲೆಗಳ ಒಂದು ಫೋಟೊ ತೆಗ್ಸ್ಕೋ ಬೇಕು ಅಂತ ನನ್ ದೋಸ್ತ್ ಶ್ಯಾಮ್ ಗೆ ತುಂಬಾ ಆಸೆ ಆಗಿತ್ತು... ಆದ್ರೆ ಎನ್ ಮಾಡೊದು Sunday holiday... ಅನ್ನೊದಕ್ಕಿಂತ ನಮ್ ಫೋಟೊ ತೆಗ್ಯೊ ಭಾಗ್ಯ ಯಾವ್ ಸ್ಟುಡಿಯೋದೋರ್ಗೂ ಇರ್ಲಿಲ್ಲಾ ಅಂತಾನೇ ಹೇಳ್ಬೋದ್ರೀ...
ಸಣ್ಣಗೆ ಬರ್ತಿದ್ದ ಮಳೆ ಜೋರಾಯ್ತು... ಅಲ್ಲೆ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಹತ್ರ ನಿಂತ್ಕೊಂಡ್ವಿ... ಹೇಳ್ಬೇಕಾ.. ಸ್ಪೆಷಲ್ ಮೈಸೂರ್ ಪಾಕ್ ನಮ್ಮನ್ನಾ ರಾ... ರಾ... ಅಂತ ಕರಿತಾ ಇತ್ತು... ನನ್ ದೋಸ್ತ್ ಪಾಪ ಕರಗಿ ನೀರಾಗಿ ಏಯ್ ಬರ್ರೊ ಒಳಗೆ ಹೋಗುವ ಅಂತ ಕರ್ಕೊಂಡು ಹೋದ... ಮೈಸೂರ್ ಪಾಕ್ ತಿಂದು, ಅಲ್ಲೆ ಶ್ಯಾಮನ mobile ಅಲ್ಲಿ photo session ಮುಗ್ಸ್ಕೊಂಡು ಹೊರಗ್ ಬಂದ್ವಿ... ದೋಸ್ತ್ ಹಾಗೆ ಮನೆಗೆ ಹೋಗ್ತೀನಿ ಅಂದ... ಅವ್ನಿಗೆ bye ಮಾಡಿ ನಾನು ಗುರು ಬೀರೂರ್ ಟ್ರೈನ್ ಬರೋದು ಇನ್ನೂ ಒಂದು ಗಂಟೆ ಇದೆ ಅಂತ ರೈಲ್ವೆ ಸ್ಟೇಷನ್ಗೆ ನೆಡ್ಕೊಂಡು ಹೊರಟ್ವಿ... ಗುರುಗೆ ಟ್ರೈನ್ ಹತ್ಸಿ... ನಾನು ಮನೆಗೆ ಹೊರಟೆ... ಮೂರೂ ತರ್ಲೆಗಳು ಮನೆಗ್ ಹೋದ್ರು... ಮನ್ಸಲ್ಲಿ ಕೋಮಾದಲ್ಲಿರೊ ಜೀವ ಬೇಗ ಮಾತಾಡೋಹಾಗ್ ಆಗ್ಲಿ ಅಂತ...
ಗುರು ಮನೆಗ್ ಹೋಗಿ ಆ  ಜೀವಕ್ಕೆ ಒಂದು dose ಕೊಟ್ಟ ನೋಡಿ... ನನ್ನ ಅಣ್ಣನ TVS – XL ಗಾಡಿ front ಬ್ಯಾಗ್ನಲ್ಲಿ ತುಂಬ್ಕೊಂಡಿದ್ದ ಮಳೆ ನೀರ್ ಕುಡ್ಕೊಂಡು coma stageಗೆ ಹೋಗಿದ್ದ ಜೀವ  full charge ಆಗಿ "am all right" ಅಂತ ನಮ್ಗೆ call ಮಾಡ್ದಾಗ ಆದ ಖುಷಿ ಅಷ್ಟಿಷ್ಟಲ್ಲಾ... J
ಹೂಂ... ಈ ಜೀವ ಗುರು ಲೈಫ್ ಗೆ ಕಾಲಿಟ್ಟು 2 ತಿಂಗ್ಳಾಗಿತ್ತು... ಸದಾ ಅವ್ನ ಜೊತೆನೇ ಇರ್ತಿದ್ದ ಆ ಜೀವ ಬೇರೆ ಯಾರೂ ಅಲ್ಲಾ ಕಣ್ರೀ... ಅವ್ನು ಇಷ್ಟ ಪಟ್ಟು ತೊಗೊಂಡ Samsung Galaxy – S3 mobile. ಏನ್ Samsung ಅವ್ರೆ ಏನೋ ಒಳ್ಳೆ ಮೊಬೈಲ್ ಅಂತ free of cost publicity ಕೊಟ್ರೆ... Ad cost ಕೊಡೊದಿರ್ಲಿ,  ಒಂದು thanks ಕೂಡ ಇಲ್ವಲ್ರೀ... ಹೋಗ್ಲಿ ಬಿಡಿ... ನಮ್ ಕಡೆಯಿಂದ ನಿಮ್ಗೊಂದು Ad gift... ಇಟ್ಕೊಳಿ... ಮಜಾ ಮಾಡಿ...
ಏನೇ ಹೇಳಿ ಒಂದಂತು  ಸತ್ಯ ನಾವು ಎಲ್ಲೇ ಹೋದ್ರು... ಏನೇ ಎಡ್ವಟ್ ಮಾಡಿದ್ರು... ಕೊನೆಗೆ ಸಿಗೋದು ಮಾತ್ರ ಮಸ್ತ್ ಖುಷಿ... ಯಾಕಂದ್ರೆ...
ಎಡವಟ್ ಈಸ್ ದ ಸೀಕ್ರೇಟ್ ಆಫ್ ಅವರ್ ಖುಷಿ ಕಣ್ರೀ...
ಹೂಂ... ಓದಾಯ್ತಲ್ವಾ... ಬೇಜಾರಾಗ್ಬೇಡ್ರೀ... ನನ್ದೊಂದು small request ... ಈ ನಮ್ಮ ಪ್ರೀತಿ ವಿಶ್ವಾಸದ ಭಾಂಧವ್ಯ ಪ್ರತಿ ಜನ್ಮದಲ್ಲಿಯೂ ಹೀಗೆ ತರ್ಲೆ ಮಾಡ್ಕೊಂಡು ಒಟ್ಗೆ ಇರ್ಲಿ ಅಂತ ಹಾರೈಸಿ...   thanks ಕಣ್ರೀ...
ಹಲೋ... ಇನ್ನೂ ಮುಗ್ದಿಲ್ಲ ಸ್ವಲ್ಪ ತಾಳ್ರಿ...
ಕಳೆದ ವರ್ಷ ಇದೇ ಜುಲೈ 28ಕ್ಕೆ ಅಪ್ಪಂಗೆ ಹುಷಾರಿಲ್ದೆ ಆಸ್ಪತ್ರೆಗೆ ಸೇರ್ಸಿದ್ವಿ... ಅಲ್ಲಿಂದ ನನ್ನ ಪಾಲಿಗೆ ಆಸ್ಪತ್ರೆ ಅನ್ನೊದು ಮನೆ  ಆಗಿತ್ತು. ಏನಾದ್ರು ಖುಷಿ ವಿಚಾರ ಇದ್ರೂ... ಖುಷಿಪಡ್ಲಿಕ್ಕೆ ಯೋಚಿಸ್ತಿದ್ದೆ... ಯಾಕಂದ್ರೆ ಒಂದು ಕ್ಷಣ ಖುಷಿ ಸಿಕ್ಕಿದ್ರೆ... ಇನ್ನೊಂದು ಕ್ಷಣ ದುಃಖ ಅನ್ನೊದು ನನ್ಗೆ ಕಟ್ಟಿಟ್ಟ ಬುತ್ತಿಯಾಗಿತ್ತು... ಖುಷಿ ಇರ್ಲಿ ... ದುಃಖ ಇರ್ಲಿ... ಗುರು - ಶ್ಯಾಮಂಗೆ phone ಮಾಡಿ ಹೇಳ್ತಿದ್ದೆ... ಶನಿವಾರ, 19ನೇ ಜನವರಿ 2013ಕ್ಕೆ ಬೆಳಿಗ್ಗೆ 3 ಗಂಟೆ ಅಷ್ಟೊತ್ಗೆ ಅಪ್ಪ ಮಂಚದಿಂದ ಬಿದ್ರು... ತಲೆಗೆ ತುಂಬಾ ಏಟಾಗಿತ್ತು... ಆಸ್ಪತ್ರೆಗೆ  ಸೇರ್ಸಿದ್ವಿ... ಡಾಕ್ಟ್ರು scan ಮಾಡಿ... stitch ಹಾಕಿ ಏನೂ problem ಇಲ್ಲಾ ಅಂತ ಹೇಳಿ ಕಳ್ಸಿದ್ರು... ಅವತ್ತು ನನ್ ದೋಸ್ತ್ ಶ್ಯಾಮ ನನ್ಗ್ ಒಂದು message ಕಳ್ಸಿದ್ದ... “Remember am always there for you...”  ಅಂತ..
ಒಂದು ವಾರದ ನಂತರ... ಅದೇ ಶನಿವಾರ 26 ಜನವರಿ 2013ಕ್ಕೆ ಮಲ್ಗಿದ್ದ ನನ್ನ ಅಪ್ಪ ಬೆಳಿಗ್ಗೆ 4 ಗಂಟೆಗೆ ಶಾಂತವಾಗಿ ಚಿರ ನಿದ್ರೆಯಲ್ಲಿ ಸಾಗಿದ್ರು... ಜೀವನದಲ್ಲಿ ಅಪ್ಪನ್ನಾ ಕಳೆದುಕೊಂಡ ನನ್ಗೆ ಏನೂ ತೋಚ್ತಾನೇ ಇರ್ಲಿಲ್ಲಾ... ಗುರು - ಶ್ಯಾಮಂಗೆ phone ಮಾಡ್ದೆ... ಮಾತಾಡ್ಲಿಕ್ಕಾಗ್ತಿರ್ಲಿಲ್ಲಾ... ಆದ್ರೂ ಅಪ್ಪ ನಮ್ ಜೊತೆ ಇಲ್ಲಾ ಅಂತ ಹೇಳಿ ಕಟ್ ಮಾಡ್ದೆ... ಗುರು ಇರೋದು ಬೆಂಗಳೂರಲ್ಲಿ ... ಶ್ಯಾಮ ರಿಪ್ಪನ್ ಪೇಟೆಲಿ... ಒಂಟಿಯಾಗಿ ನೋವಲ್ಲಿದ್ದ ನನ್ಗೆ ದುಃಖ ಹೊರಾಗ್ ಹಾಕ್ಲಿಕ್ಕೂ ಆಗ್ತಿರ್ಲಿಲ್ಲಾ... ಆ ಸಮಯದಲ್ಲಿ ನನ್ನ ನೋವನ್ನ ಅರ್ಥ ಮಾಡ್ಕೊಂಡು ನನ್ನ ದುಃಖನಾ ಹೊರಗ್ ಹಾಕ್ಲಿಕ್ಕೆ ಹೆಗಲು ಕೊಟ್ಟಿದ್ದು ಇದೇ ನನ್ನ ಎರಡ್ ತರ್ಲೆಗಳಾದ ಗುರು - ಶ್ಯಾಮ... ಅವತ್ತಿನ ದಿನ ಎಲ್ಲಾ ಕಾರ್ಯ ಮುಗಿಯೋವರ್ಗೂ ಮನೆ ಮಗನಿಗಿಂತ ಹೆಚ್ಚಾಗಿದ್ದ ನನ್ನ ದೋಸ್ತ್  ನಿಜವಾದ ಪ್ರೀತಿ - ವಿಶ್ವಾಸ - ಗೆಳೆತನ ಅಂದ್ರೆ ಏನು ಅನ್ನೊದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ...
ಭಾನುವಾರ ಬೆಳಗ್ಗೆ ಬೆಂಗಳೂರಿಂದ ನನ್ನ ಗುರು - ನನ್ನ ತಮ್ಮನ್ನ ನೋಡಿ ಅವ್ನ ಜೊತೆ ಮಾತಾಡ್ದಾಗಾನೆ ನನ್ನ ಹ್ರುದಯ ಬಡಿತ ಮತ್ತೆ ಶುರುವಾಗಿದ್ದು...  ಮುಂದಿನ ಎಲ್ಲಾ ಕಾರ್ಯ ಮುಗಿಯೋತನ್ಕ, ತಮ್ಮ ಕೆಲ್ಸ ಬಿಟ್ಟು ನನ್ಗೋಸ್ಕಾರ ಇವ್ರು ಮಾಡಿದ್ನಾ ನಾನು ಏಳೇಳು ಜನ್ಮದಲ್ಲೂ ತೀರ್ಸೋಕಾಗಲ್ಲ...
ಆ ಘಟನೆಯ ನಂತರ ಜೀವನದಲ್ಲಿ ಏನೂ ಬೇಡ ಅನ್ನೋ ಮನಸ್ಸಿಂದ ನನ್ನ ಜೀವನ ಸಾಗಿತ್ತು... ಈ ವರ್ಷದ ಹುಟ್ಟು ಹಬ್ಬ ಕೂಡ ಯಾಕಾದ್ರು ಬಂತೋ ಅನ್ಸಿತ್ತು... ಏನೂ ಬೇಡದ ಮನ್ಸಿಂದ ಮಲ್ಗಿದ್ದ ನನ್ಗೆ ಎಲ್ಲಾ ದುಃಖನು ಮರೆತು ಖುಷಿಯಿಂದ ಇರೋ ಹಾಗ್ ಮಾಡಿದ್ದು ಇದೇ ನನ್ ತರ್ಲೆ ಗುರು - ಶ್ಯಾಮ...  ಮಧ್ಯರಾತ್ರಿ 12 ಗಂಟೆಗೆ ಮಳೇಲಿ ಸುಮಾರು 7 ಕಿ.ಮೀ. ನೆಡ್ಕೊಂಡು ಬಂದು... ಬೈಕ್ನಲ್ಲಿ ಬಂದಿದೀವಿ ಅಂತ ಸುಳ್ಳು ಹೇಳಿ... ಅಮ್ಮಾ ಈ ಮಳೇಲಿ ಬಂದಿದೀರಲೋ ಅಂದಿದ್ಕೆ... ಶ್ಯಾಮ ಈ ಮಳೇಲೆ ನೀವ್ ನಿಮ್ಮ ಮಗ್ಳನ್ನಾ ಹೆತ್ತಿದಿರಾ... ನಮ್ದೇನು? ಅಂತ ಅಮ್ಮಂಗೆ ತರ್ಲೆ ಉತ್ರ ಕೊಟ್ಟು,  ನನ್ಗೆ ಎಂದೂ ಮರೆಯಲಾಗದ ಮಧುರ ಕ್ಷಣಗಳನ್ನ ನನ್ನ ಹುಟ್ಟು ಹಬ್ಬಕ್ಕೆ ಉಡುಗೋರೆಯಾಗಿ ಕೊಟ್ಟ ಈ ತರ್ಲೆಗಳನ್ನ ಪಡ್ದಿರೋ ನಾನು ನಿಜವಾಗಿಯೂ lucky ಕಣ್ರೀ...
ಪ್ರೀತಿ ಹಾಗೂ ವಿಶ್ವಾಸದ ಈ ತರ್ಲೆಗಳ ಬಾಂಧವ್ಯನೇ ನನ್ನ ಬಾಳಿನ ಸಿರಿ ಕಣ್ರೀ... ಈ ಸಿರಿತನ ಸದಾ ನನ್ಜೊತೆ ಪ್ರತಿ ಜನ್ಮದಲ್ಲೂ ಇರ್ಬೇಕು ಅನ್ನೋದೆ ನನ್ನ ಆಸೆ ಕಣ್ರೀ...J




Sunday 24 February 2013

ನೆನಪಿನಲ್ಲೇ ಸನಿಹ...


ನೆನಪಿನಲ್ಲೇ ಸನಿಹ...

ಮರುಭೂಮಿಯಲ್ಲಿ ಚಿಗುರೊಡೆದು, ಮಲೆನಾಡಿನಲ್ಲಿ ಬೆಳೆದು, ಎಲ್ಲೆಡೆಯೂ ತನ್ನ ಬೇರನ್ನು ಚಾಚಿ, ತನ್ನೆಡೆಗೆ ಬಂದ ಸರ್ವರಿಗೂ ಆಶ್ರಯ ನೀಡಿದ ಓ ನನ್ನ ಪ್ರೀತಿಯ ಕಲ್ಪವೃಕ್ಷವೇ ನಿನಗೆ ಕೋಟಿ ಕೋಟಿ ನಮನ...

ಈ ನನ್ನ ಕಲ್ಪವೃಕ್ಷವ ನಾ ಕಂಡದ್ದು ನಾ ಈ ಕಲ್ಪವೃಕ್ಷದ ಕುಡಿಯಾಗಿ ಚಿಗುರಿದಾಗ...

ಮರುಭೂಮಿಯಲ್ಲಿ ಜನಿಸಿದ ಈ ಕಲ್ಪವೃಕ್ಷ ಬೇರಾರೂ ಅಲ್ಲಾ... ನನ್ನ ಪ್ರೀತಿಯ ಅಪ್ಪ...

ಬಳ್ಳಾರಿಯಲ್ಲಿ ಸಮೃದ್ಧಿಯ ಸಿರಿಯಲ್ಲಿ ಜನಿಸಿದ ಕಲ್ಪವೃಕ್ಷ ತನ್ನ ಬಾಲ್ಯದಲ್ಲಿಯೇ ಬಿರುಗಾಳಿಗೆ ಸಿಲುಕಿ ಸಮೃದ್ಧಿಯ ಸಿರಿಯನ್ನು ಕಳೆದುಕೊಂಡು ಮರುಭೂಮಿಯಲ್ಲಿ ಮತ್ತೆ ಚಿಗುರಲು ತುಂತುರು ಮಳೆಗಾಗಿ ಹವಣಿಸುತ್ತಿತ್ತು.

ಪುಟ್ಟ ಜೀವ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲದಿಂದ ಪರರ ಆಶ್ರಯದಲ್ಲಿ ಬಿಸಿಲ ಬೇಗೆಯನ್ನು ಸಹಿಸಿಕೊಂಡು ಯಾರೂ ಕದಿಯಲಾಗದ ಅಮೂಲ್ಯವಾದ ವಿದ್ಯೆ ಎಂಬ ಸಿರಿಯನ್ನು ಸಂಪಾದಿಸಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿತ್ತು.

ಆಗಿನ ಮದ್ರಾಸಿನ ಮೆಟ್ರಿಕ್ಯುಲೇಷನ್ ಮುಗಿಸಿ ಸ್ವಾವಲಂಬಿಯಾಗಲು  ಮಲೆನಾಡಿನ ಸಿಹಿಮೊಗೆಯಾದ ಶಿವಮೊಗ್ಗದೆಡೆಗೆ ಸಾಗಿತು... ಕೇವಲ 30 ರೂಪಾಯಿಗೆ ಸಕ್ಕರೆ ಕಾರ್ಖಾನೆಯೊಂದರಲ್ಲಿ ಕೆಲಸ ಪಡೆದು ಮರುಭೂಮಿಯಲ್ಲಿರುವ ತನ್ನವರಿಗೆ ತುಂತುರು ಮಳೆಯ ಸುರಿಸಿತ್ತು...

ಪ್ರತಿನಿತ್ಯವೂ 12 ಕಿ.ಮೀ. ನೆಡೆದು ವರ್ಷದ 365  ದಿನವೂ ಶ್ರಮಿಸಿ ಮೆಚ್ಚುಗೆಗೆ ಪಾತ್ರವಾಗಿ ಮಲೆನಾಡಿನಲ್ಲಿ ತನ್ನ ಸಂಸಾರವ ಬೆಳೆಸಿತು.  ತನ್ನೆಡೆಗೆ ಬಂದ ಪ್ರತಿಯೊಬ್ಬರಿಗೂ ಸಹಾ ಸಹಾಯ ಹಸ್ತ ನೀಡಿ, ಅನೇಕ ಸಂಸಾರಕ್ಕೆ ನೆರಳನ್ನು ನೀಡಿದ ಈ ಕಲ್ಪವೃಕ್ಷ ಎಲ್ಲರ ಪಾಲಿಗೆ ಕಲ್ಪವೃಕ್ಷವೇ ಆಗಿತ್ತು.

ಕೇವಲ 30 ರೂಪಾಯಿಗೆ ಕೆಲಸಕ್ಕೆ ಸೇರಿದ ಈ ವೃಕ್ಷ ಮ್ಯಾನೇಜರ್ ಆಗಿ ಕಂಪನಿಯ ಆರ್ಥಿಕ ವ್ಯವಹಾರವನ್ನು ನಿಷ್ಠೆಯಿಂದ ನಿರ್ವಹಿಸಿ ಮೆಚ್ಚುಗೆಯನ್ನು ಪಡೆದಿತ್ತು. ತಾನು ಮರುಭೂಮಿಯಲ್ಲಿ ಬೆಳೆದರೂ ನಮ್ಮನ್ನು ತನ್ನ ನೆರಳಿನಲ್ಲಿಯೇ ಪೋಷಿಸಿತು.

ಮಲೆನಾಡಿನ ಸಿರಿಯಲ್ಲಿ ಸುಖವಾಗಿದ್ದ ಜೀವಕ್ಕೆ ಆಘಾತವೊಂದು ಕಾದಿತ್ತು... ಕಲ್ಪವೃಕ್ಷ ಸಿಡಿಲಿನ ಬಡಿತಕ್ಕೆ ಸಿಲುಕಿ ಮತ್ತೆ ಪರಿತಪಿಸುವಂತಾಯಿತು. ತಾನು ಕಾರ್ಯನಿರ್ವಹಿಸುತ್ತಿದ್ದ ಸಕ್ಕರೆ ಕಾರ್ಖಾನೆ ಇದ್ದಕ್ಕಿದ್ದಂತೆ ನಿಂತು ಹೋಯಿತು. ಈ ಸಿಡಿಲಿನ ತಾಪ ತಡೆಯಲಾಗದೆ ಕಲ್ಪವೃಕ್ಷ ಪ್ರತಿ ಕ್ಷಣವೂ ಚಿಂತೆಯಿಂದ ಬಾಡತೊಡಗಿತು...

ಶನಿವಾರ, ಜನವರಿ 26, 2013 ರಂದು ಬೆಳಗ್ಗೆ 4:30ಕ್ಕೆ ನನ್ನ ಕಲ್ಪವೃಕ್ಷ ಚಿರನಿದ್ರೆಯಲ್ಲಿ ಸಾಗಿತ್ತು... ಅಂದು ನಾ ಕಂಡದ್ದು ನನ್ನ ಕಲ್ಪವೃಕ್ಷ ಸಂಪಾದಿಸಿದ ಬೆಲೆಕಟ್ಟಲಾಗದ ಆಸ್ತಿಯನ್ನು. ಅದು ಪ್ರತಿಯೊಬ್ಬರು ಹೇಳಿದ ಮಾತು... "ನಿಷ್ಠಾವಂತ, ಸಹಾಯ ಹಸ್ತವ ನೀಡಿ, ಪ್ರೀತಿ ವಿಶ್ವಾಸದಿಂದ ಅನೇಕ ಕುಟುಂಬದ ನೆಲೆಗೆ ಕಾರಣರಾದ ಮಹಾನ್ ಪುರುಷ" ಎಂಬ ಕೊಟಿ ಕೊಟ್ಟರೂ ಸಿಗದ ಪ್ರೀತಿಯ ಹೆಗ್ಗಳಿಕೆಯ ಮಾತು...

ಮೌನವಾಗಿ ಸರ್ವರ ಮನದಲ್ಲಿಯೂ ಹಸಿರಾಗಿರುವ ಈ ಕಲ್ಪವೃಕ್ಷ ಈಗ ಸನಿಹವಾಗಿರುವುದು ನೆನಪಿನಲ್ಲಿ ಮಾತ್ರ...

ದೇವರು ನಮ್ಮ ಪಾಲಿಗೆ ಕರುಣಿಸಿದ ಈ ಕಲ್ಪವೃಕ್ಷವೇ ನಮ್ಮ ಬಾಳಿನ ಆಸ್ತಿ...

ಓ ಕಲ್ಪವೃಕ್ಷವೇ ನೀ ನನ್ನ ಮನದಾಳದಲ್ಲಿ ಹಸಿರಾಗಿ ನನ್ನ ಹೃದಯದ ಬಡಿತವಾಗಿ ನನ್ನ ಬಾಳಿನಲಿ ಸದಾ ಚಿರಂತವಾಗಿರುವೆ...

ತನ್ನ ತನವನ್ನು ತೊರೆದು ಸರ್ವಸ್ವವನ್ನೂ ಪರರಿಗೆ ಧಾರೆಯೆರೆದ ನನ್ನ ಈ ಕಲ್ಪವೃಕ್ಷ ಸದಾ ಅಮರ...